ಕನ್ನಡ ಚಿತ್ರರಂಗ ಅಲ್ಲದೆ ಪರಭಾಷೆಯಲ್ಲೂ ಪ್ರಸಿದ್ದಿ ಪಡೆದಿರುವ ಕಿಚ್ಚ ಸುದೀಪ್ ಅವರು `ಕೇಸ್ ನಂ `18/9` ಕನ್ನಡ ಚಿತ್ರವನ್ನು ಕಳೆದ ಶನಿವಾರ ಸಂಜೆ ರೇಣುಕಾಂಬ ಪ್ರದರ್ಶನ ಮಂದಿರದಲ್ಲಿ ವೀಕ್ಷಿಸಿ ಚಿತ್ರವನ್ನು ಮರುಬಿಡುಗಡೆ ಮಾಡುವಂತೆ ಸಲಹೆ ಮಾಡಿದ್ದಾರೆ. ಅದಕ್ಕೆ ಕಾರಣ ಚಿತ್ರದಲ್ಲಿ ಇರುವ ಗುಣಾತ್ಮಕ ಅಂಶಗಳು. ಯಾಕೆ ಇಂತಹ ಚಿತ್ರಕ್ಕೆ ಪ್ರೋತ್ಸಾಹ ಸಿಕ್ಕುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಮಾಡಿದ ಕಿಚ್ಚ ಸುದೀಪ್ ಅವರು ನೈಜ ರೀತಿಯಲ್ಲಿ ಸಮಾಜಕ್ಕೆ ಅನುಗುಣವಾದ ಕಥಾ ವಸ್ತುವನ್ನು ಅಷ್ಟೇ ಸಹಜವಾಗಿ ಅಭಿವ್ಯಕ್ತ ಮಾಡಿರುವುದರ ಬಗ್ಗೆ ಎಲ್ಲ ಕಲಾವಿದರುಗಳಿಗೆ ಅಭಿನಂದನೆ ತಿಳಿಸಿ ಮುಕ್ತ ಪ್ರಶಂಸೆಯನ್ನು ಮಾಡಿದ್ದಾರೆ.
ನಾನೊಂದು ಒಳ್ಳೆಯ ಸಿನೆಮಾ ನೋಡಿದ ತೃಪ್ತಿ ಅನುಭವಿಸಿದೆ. ಪ್ರತಿಯೊಂದು ದೃಶ್ಯ ಸಹಜ, ಸುಂದರ ಹಾಗೂ ಸರಳವಾಗಿ ಕಟ್ಟಿ ಕೊಡಲಾಗಿದೆ. ಸಣ್ಣ ಪುಟ್ಟ ವಿಚಾರಗಳಿಗೂ ಮಾನ್ಯತೆ ನೀಡಲಾಗಿದೆ. ಈ ರೀತಿಯ ಒಳ್ಳೆ ಮಟ್ಟದ ಚಿತ್ರಕ್ಕೆ ಯಶಸ್ಸು ಸಿಕ್ಕಬೇಕು, ಬಹುಶಃ ಈ ಚಿತ್ರ ದೊಡ್ಡ ಚಿತ್ರಗಳ ಬಿಡುಗಡೆ ಅಲೆಯಲ್ಲಿ ಸಿಕ್ಕಿ ಕೊಂಡಿರಬೇಕು ಎಂದು ಅಭಿಪ್ರಾಯ ಪಟ್ಟ ಕಿಚ್ಚ ಸುದೀಪ್ ಈ ಸಿನೆಮವನ್ನು ಮರು ಬಿಡುಗಡೆ ದೊಡ್ಡ ಮಟ್ಟದಲ್ಲಿ ಮಾಡಬಹುದು ಎಂದು ತಮ್ಮ ಅನಿಸಿಕೆಯನ್ನು ಹೇಳಿಕೊಂಡರು.
ಕಿಚ್ಚ ಸುದೀಪ್ ಚಿತ್ರ ವೀಕ್ಷಿಸಲು ಬಂದಾಗ ನಟ ತಿಲಕ್, ಕ್ರಾಂತಿ ಕ್ರಿಯೇಷನ್ ಸಂಸ್ಥೆ `ಕೇಸ್ ನ0 18/9` ನಿರ್ಮಾಪಕರುಗಳಾದ ವಿ,ಕೆ. ಮೋಹನ್, ಪ್ರವೀಣ್ ಕುಮಾರ್ ಶೆಟ್ಟಿ, ಶಿವಾನಂದ್ ಶೆಟ್ಟಿ, ಕಾಂತಿ ಶೆಟ್ಟಿ ಹಾಜರಿದ್ದರು.
ನಾಯಕ ನಿರಂಜನ್, ಸಿಂಧುಲೋಕನಾಥ್, ಶ್ವೇತ ಪಂಡಿತ್, ಅಭಿ, ಕಾರ್ತಿಕ್ ಶರ್ಮ, ಕರಿ ಸುಬ್ಬು ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಇದ್ದಾರೆ. ನಿರ್ದೇಶಕರು ಮಹೇಶ್ ರಾವು, ಛಾಯಾಗ್ರಾಹಕ ಸಭಾ ಕುಮಾರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ರಾಜು ಬೆಳೆಗೆರೆ ಅವರ ಸಂಭಾಷಣೆ ಈ ಚಿತ್ರಕ್ಕಿದೆ.